ನರೇಂದ್ರ ಅಚ್ಯುತ ದಾಭೋಲಕರ (೧ ನವಂಬರ್ ೧೯೪೫- ೨೦ ಅಗಸ್ಟ್ ೨೦೧೩),ವಿಚಾರವಾದಿಗಳು ಮತ್ತು ಮಹಾರಾಷ್ಟ್ರದ ಲೇಖಕರೂ ಆಗಿದ್ದರು. ಅಂಧಶ್ರದ್ದೆಯನ್ನು ಹೋಗಲಾಡಿಸಲು ಕಟ್ಟಿದ ಅಂಧಶ್ರದ್ಧಾ ನಿರ್ಮೂಲನ ಸಮಿತಿ (ಎಂಎಎನ್‌ಎಸ್)ಯ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. == ಜೀವನ == ಅಚ್ಯುತ ಹಾಗೂ ತಾರಾಬಾಯಿ ದಂಪತಿಯ ಹತ್ತು ಮಕ್ಕಳಲ್ಲಿ ಕಿರಿಯವನಾಗಿ ೧೯೪೫ರ ನವೆಂಬರ್ ೧ರಂದು ನರೇಂದ್ರರು ಹುಟ್ಟಿದರು. ಸತಾರಾ ನ್ಯೂ ಇಂಗ್ಲಿಷ್ ಸ್ಕೂಲ್ ಹಾಗೂ ಸಾಂಗ್ಲಿಯ ವೆಲ್ಲಿಂಗ್ಡನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮೀರಜ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಗಳಿಸಿದರು. . ಶೈಲ ಅವರನ್ನು ಮದುವೆಯಾಗಿದ್ದ ಇವರಿಗೆ, ಹಮಿದ್ ಮತ್ತು ಮುಕ್ತ ಎಂಬ ಇಬ್ಬರು ಮಕ್ಕಳಿದ್ದರು. ಕಬಡ್ಡಿ ಪಟುವೂ ಆಗಿದ್ದ ಅವರು, ಬಾಂಗ್ಲಾದೇಶದ ವಿರುದ್ಧ ಭಾರತವನ್ನು ಪ್ರತಿನಿಧಿಸಿದ್ದರು. ಈ ಕ್ರೀಡೆಯಲ್ಲಿ ಅವರ ಸಾಧನೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರವು ಶಿವ ಛತ್ರಪತಿ ಯುವ ಪ್ರಶಸ್ತಿಯನ್ನು ಕೊಟ್ಟಿತ್ತು. == ಕ್ರಾಂತಿಕಾರೀ ಕೆಲಸಗಳು == ಹನ್ನೆರಡು ವರ್ಷ ವೈದ್ಯರಾಗಿ ಕೆಲಸ ಮಾಡಿದ ಅವರು ೧೯೮೦ ರಲ್ಲಿ ಸಾಮಾಜಿಕ ಕಾರ್ಯಕರ್ತರಾದರು. ಸಾಮಾಜಿಕ ನ್ಯಾಯಕ್ಕಾಗಿ ಚಳುವಳಿಯಲ್ಲಿ ತೊಡಗಿಕೊಂಡರು. ಕ್ರಮೇಣ ಮೂಢನಂಬಿಕೆಗಳನ್ನು ತೊಡೆದುಹಾಕುವತ್ತ ಗಮನ ಹರಿಸಿದರು. ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯನ್ನು ಸ್ಥಾಪಿಸಿದರು. ಮೂಢನಂಬಿಕೆ, ಮಾಟ-ಮಂತ್ರ ಹಾಗೂ ರೋಗಗಳನ್ನು ನಿವಾರಣೆ ಮಾಡುವುದಾಗಿ ಹೇಳಿಕೊಳ್ಳುವ ಪವಾಡಪುರುಷರು ಹಾಗೂ ಸ್ವಘೋಷಿತ ದೇವಮಾನವರ ವಿರುದ್ಧ ಅವರು ಹೋರಾಟಕ್ಕಿಳಿದರು. ಪವಾಡಗಳು ಮತ್ತು ಮೂಢನಂಬಿಕೆಗಳ ಬಗೆಗೆ ಪುಸ್ತಕಗಳನ್ನು ಬರೆದರು, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಯ ಬಗ್ಗೆ ಪ್ರಚಾರ ಮಾಡಿದರು. == ಮೂಢನಂಬಿಕೆ ವಿರೋಧಿ ಮಸೂದೆ == ಅವರು ೧೯೯೦ರಲ್ಲಿ ಮೂಢನಂಬಿಕೆ ವಿರೋಧಿ ಮಸೂದೆಯ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದರು. ವಿಧಾನಸಭೆಯಲ್ಲಿ ಈ ಮಸೂದೆ ೨೦೦೩ರಲ್ಲಿ ಮಂಡನೆಯಾದರೂ ಹಿಂದೂ ಸಮುದಾಯದವರ ಭಾವನೆಗಳಿಗೆ ನೋವಾಗುತ್ತದೆ ಎಂದು ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ವಿರೋಧಿಸಿದವು . ಮಸೂದೆಯಲ್ಲಿ ಎಲ್ಲಿಯೂ ಧರ್ಮ ಅಥವಾ ದೇವರ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ದಾಭೋಲಕರ ಸಮರ್ಥಿಸಿಕೊಂಡರು. == ನಿಧನ == ೨೦ ಅಗಸ್ಟ್ ೨೦೧೩ ರಂದು ಅವರು ಪುಣೆಯಲ್ಲಿ ಎಂದಿನಂತೆ ಬೆಳಗಿನ ನಡಿಗೆಯಲ್ಲಿದ್ದಾಗ ಅವರನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಕೊಂದರು. ಅವರ ಮರಣದ ಒಂದು ದಿನದ ನಂತರ ಮಹಾರಾಷ್ಟ್ರ ಸರಕಾರವು ಮೂಢನಂಬಿಕೆ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು ತೀರ್ಮಾನಿಸಿತು. ಆದರೆ ಆ ಮಸೂದೆಯು ಕಾನೂನಾಗಿಜಾರಿಗೆ ಬರಲು ಅದಕ್ಕೆ ಸಂಸತ್ತಿನ ಬೆಂಬಲ ಅಗತ್ಯವಾಗಿದೆ. == ಉಲ್ಲೇಖಗಳು ==